ಚಿತ್ರರಂಗದಲ್ಲಿ ಬೇರೆಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರು ಒಂದೇ ಚಿತ್ರದಲ್ಲಿ ಒಂದಾಗುತ್ತಿದ್ದಾರೆ; ಅದು ‘ಹೆಬ್ಬುಲಿ’ ಚಿತ್ರದ ಮೂಲಕ.
ಎಸ್ ಆರ್ ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಘುನಾಥ್ ಮತ್ತು ಟಿ.ಎಸ್ ಸತ್ಯನಾರಾಯಣ ನಿರ್ಮಿಸಿತ್ತಿರುವ ‘ಹೆಬ್ಬುಲಿ’ ಚಿತ್ರಕ್ಕೆ ಖ್ಯಾತ ಉದ್ಯಮಿ ಉಮಾಪತಿ ಫಿಲಂಸ್ನ ಉಮಾಪತಿ ಅವರು ಸಹ ನಿರ್ಮಾಪಕರಾಗಿ ಕೈಜೋಡಿಸುತ್ತಿದ್ದಾರೆ.
ಕಿಚ್ಚ ಸುದೀಪ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವ ‘ಹೆಬ್ಬುಲಿ’ಯಲ್ಲಿ ರವಿಶಂಕರ್, ಸಂಪತ್ ರಾಜ್ ಮತ್ತು ಚಿಕ್ಕಣ್ಣ ಸೇರಿದಂತೆ ಅನೇಕ ಖ್ಯಾತ ನಟರ ಪಡೆಯೇ ತಾರಾಗಣದಲ್ಲಿದೆ.
ಏಪ್ರಿಲ್ ೧೮ನೇ ತಾರೀಖು ‘ಹೆಬ್ಬುಲಿ’ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ನಂತರ ಏಪ್ರಿಲ್ ೨೫ರಿಂದ ಸತತವಾಗಿ ಚಿತ್ರೀಕರಣ ಆರಂಭವಾಗಲಿದೆ.
ಮುಂಗಾರು ಮಳೆ ಚಿತ್ರದ ಛಾಯಾಗ್ರಹಣದ ಮೂಲಕ ಹೆಸರು ಮಾಡಿದವರು ಕೃಷ್ಣ. ನಂತರ ಅನೇಕ ಯಶಸ್ವಿ ಚಿತ್ರಗಳಿಗೆ ಕ್ಯಾಮೆರಾ ಕೆಲಸ ನಿಭಾಯಿದ ಕೃಷ್ಣ ಗಜಕೇಸರಿ ಸಿನಿಮಾದ ಮೂಲಕ ನಿರ್ದೇಶಕರೂ ಆದವರು. ಇವರ ನಿರ್ದೇಶನದ ಮೊದಲ ಚಿತ್ರವೇ ಸೂಪರ್ ಹಿಟ್ ಆಗಿತ್ತು. ನಂತರ ಕೃಷ್ಣ ಈಗ ತಮ್ಮ ಎರಡನೇ ಚಿತ್ರ ‘ಹೆಬ್ಬುಲಿ’ಯನ್ನು ನಿರ್ದೇಶಿಸಲು ತಯಾರಾಗಿದ್ದಾರೆ.
ಕೃಷ್ಣ ಅವರೇ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ ‘ಹೆಬ್ಬುಲಿ’ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ, ಕರುಣಾಕರ್ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಮತ್ತು ಸುಧೀಂದ್ರ ವೆಂಕಟೇಶ್ ಅವರ ಪತ್ರಿಕಾ ಪ್ರಚಾರವಿದೆ. ಜಮ್ಮು, ಕಾಶ್ಮೀರ, ಬಳ್ಳಾರಿ, ಹೊಸಪೇಟೆ, ಮೈಸೂರು, ಬೆಂಗಳೂರು, ಹೈದರಾಬಾದ್, ಆಸ್ಟ್ರೇಲಿಯಾ, ನಾರ್ವೆ, ಲಂಡನ್ ಮತ್ತು ಐಸ್ಲ್ಯಾಂಡ್ ಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ.